ಬೈಲಹೊಂಗಲ- ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ ಪಸಲು ಹಾನಿಗೆ ಪರಿಹಾರ, ರೈತರ ಸಾಲ ಮನ್ನಾ, ಬೈಲಹೊಂಗಲ ತಾಲೂಕು ಬರಪೀಡಿತ ಎಂದು ಘೋಷಣೆ, ರೈತರಿಗೆ ಹೆಚ್ಚಿನ ಸಹಾಯಧನ ನೀಡುವಂತೆ ಸರಕಾರಕ್ಕೆ ಆಗ್ರಹಿಸಿ ಕರ್ನಾಟಕ ಪ್ರದೇಶ ಕೃಷಿಕ ಸಮಾಜದ ತಾಲೂಕ ಘಟಕದ ಪದಾಧಿಕಾರಿಗಳು ಉಪವಿಭಾಗಾಧಿಕಾರಿಗಳು, ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.
ಕರ್ನಾಟಕ ಪ್ರದೇಶ ಕೃಷಿಕ ಸಮಾಜದ ತಾಲೂಕ ಅಧ್ಯಕ್ಷ ಗುರು ಮೆಟಗುಡ್ಡ ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿ ಮಾತನಾಡಿ,
ಈ ವರ್ಷ ಮಳೆ ಅಭಾವದಿಂದ ತಾಲೂಕಿನಾದ್ಯಂತ ಬರಪರಿಸ್ಥಿತಿ ತಲೆದೋರಿದ್ದು ರೈತರು ಸಂಕಷ್ಟಕ್ಕೆ ಸಿಲುಕ್ಕಿದ್ದು ರೈತನೊಂದಿಗೆ ಜನ-ಜಾನುವಾರುಗಳು ಸಹ ಕುಡಿಯಲು ನೀರಿಲ್ಲದೇ ಮೇವಿಲ್ಲದೆ ಹೀನಾಯ ಪರಿಸ್ಥಿತಿ ಎದುರಿಸುವಂತಾಗಿದೆ. ಮಳೆ ಕೊರತೆಯಿಂದಾಗಿ ತಾಲೂಕಿನಾದ್ಯಂತ ಬೆಳೆ ನಾಶವಾಗಿರುವುದರಿಂದ ರೈತ ಮತ್ತು ರೈತನನ್ನು ನಂಬಿರುವ ಕುಟುಂಬಗಳು ಜೀವನ ನಡೆಸುವುದೇ ಕಷ್ಟ ಸಾಧ್ಯವಾಗಿದೆ ಕೂಡಲೇ ರಾಜ್ಯ ಸರಕಾರವು ಬೈಲಹೊಂಗಲ ತಾಲೂಕನ್ನು ಬರಪೀಡಿತ ತಾಲೂಕ ಎಂದು ಘೋಷಿಸಬೇಕೆಂದು ಆಗ್ರಹಿಸಿದರು.
ಮುಂಬರುವ ವಿಧಾನಸಭೆ ಅಧಿವೇಶನದಲ್ಲಿ ಸ್ಥಳೀಯ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು ಬೈಲಹೊಂಗಲ ತಾಲೂಕನ್ನು ಬರಪೀಡಿತ ಎಂದು ಘೋಷಿಸಲು ಆಗ್ರಹ ಪಡಿಸಬೇಕು. ಸರ್ಕಾರವು ಮತ್ತು ಇಲಾಖೆಯು ರಾಜ್ಯದ ರೈತ ಕುಲವನ್ನು ಉಳಿಸಲು ತತಕ್ಷಣದ ಕ್ರಮಗಳನ್ನು ಕೈಗೊಳ್ಳಬೇಕು. ಈಗಾಗಲೇ ಮುಂಗಾರು ಬೆಳೆಗೆ ನೀಡಿದ್ದ ಬಿತ್ತನೆ ಬೀಜ ಮುಂತಾದವುಗಳನ್ನು ಮತ್ತೊಮ್ಮೆ ಹಿಂಗಾರು ಹಂಗಾಮಿಗೆ ಸರ್ಕಾರ ಸಂಪೂರ್ಣ ಉಚಿತವಾಗಿ ಎಲ್ಲಾ, ರೈತರಿಗೂ ನೀಡಬೇಕು.ಬರ ನಿರ್ವಹಣೆಗೆ ಬೇಕಾಗಿರುವ ಕುಡಿಯುವ ನೀರು, ದನಕರುಗಳಿಗೆ ಮೇವು ಒದಗಿಸಬೇಕು. ಬರ ನಿರ್ವಹಣೆಗೆ ಪ್ರತಿ ವಿಧಾನ ಸಭಾ ಕ್ಷೇತ್ರಕೂ ಕನಿಷ್ಠ 10 ಕೋಟಿ ಹಣ ಬಿಡುಗಡೆ ಮಾಡಬೇಕೆಂದು ಸರಕಾರವನ್ನು ಒತ್ತಾಯಿಸಿದರು.
ರೈತರ ಕೃಷಿ ಪಂಪ್ ಸೆಟ್ ಗಳಿಗೆ ಕನಿಷ್ಠ 7 ಗಂಟೆಯ ಅಡೆತಡೆ ಇಲ್ಲದ ಗುಣಮಟ್ಟದ 3 ಫೇಸ್ ವಿದ್ಯುತ್ ನೀಡಬೇಕು. ಕೃಷಿ ಪಂಪ್ ಸೆಟ್ ವಿದ್ಯುತ್ ಪರಿವರ್ತಕಗಳು ಸುಟ್ಟ, ಕೆಟ್ಟು ಹೋದಲ್ಲಿ ತಕ್ಷಣ ಬದಲಾವಣೆ ಮಾಡಬೇಕು. ರೈತರ ಭೂ ಕಂದಾಯವನ್ನು ಮನ್ನಾ ಮಾಡಬೇಕು. ಎಲ್ಲ ವರ್ಗದ ರೈತರು ವಾಣಿಜ್ಯ ಬ್ಯಾಂಕ್ ಮತ್ತು ಸಹಕಾರ ಬ್ಯಾಂಕುಗಳಲ್ಲಿ ಪಡೆದಿರುವ ಬೆಳೆ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕು.
ಮೇಲಿನ ಬೇಡಿಕೆಗಳನ್ನು ತತಕ್ಷಣವೇ ಕ್ರಮ ವಹಿಸಿ ಬರಕ್ಕೆ ಸಿಲುಕಿರುವ ರೈತ ಮತ್ತು ಕೃಷಿಯನ್ನು ಉಳಿಸಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ಪ್ರದೇಶ ಕೃಷಿಕ ಸಮಾಜ ಉಪಾದ್ಯಕ್ಷ ಶಂಕರಗೌಡ ದೊಡಗೌಡ್ರ, ನಿರ್ದೆಶಕರಾದ ಶಿವಪುತ್ರಪ್ಪ ತಟವಾಟಿ, ನಾಗನಗೌಡ ಭರಮಗೌಡರ, ಪ್ರಕಾಶ ಕಾರಿಮನಿ, ಮಹಾಂತೇಶ ಅಕ್ಕಿ, ಬಸವರಾಜ ಶಿಂತ್ರಿ, ಸೋಮನಗೌಡ ಪಾಟೀಲ, ಬಸಪ್ಪ ಕರವೀರನವರ, ಶ್ರೀಶೈಲ ಹೊಸೂರ, ಕುಮಾರ ಹೊಸಮನಿ, ವಿನಾಯಕ ಕಬ್ಬಲಗಿ, ಮೊದಲಾದವರು ಉಪಸ್ಥಿತರಿದ್ದರು.







